ನಾಗಮಂಗಲ
ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಉತ್ತರ ಭಾಗದಲ್ಲಿರುವ ತಾಲ್ಲೂಕು. ಉತ್ತರಕ್ಕೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು. ಪಶ್ಚಿಮಕ್ಕೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮತ್ತು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕುಗಳು. ಪೂರ್ವಕ್ಕೆ ತುಮಕೂರು ಜಿಲ್ಲೆಯ ಕುಣಿಗಲ್ ಮತ್ತು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕುಗಳು ಮತ್ತು ದಕ್ಷಿಣಕ್ಕೆ ಮಂಡ್ಯ ಮತ್ತು ಪಾಂಡವಪುರ ತಾಲ್ಲೂಕುಗಳು ಇವೆ. ಇದು ಮಂಡ್ಯ ಜಿಲ್ಲೆಯ ಅತ್ಯಂತ ದೊಡ್ಡ ತಾಲ್ಲೂಕು. ಪಾಂಡವಪುರ ಉಪವಿಭಾಗಕ್ಕೆ ಸೇರಿರುವ ಈ ತಾಲ್ಲೂಕಿನ ಹೋಬಳಿಗಳು ಕಸಬೆ, ಬಿಂಡಿಗನವಿಲೆ, ಬೆಳ್ಳೂರು, ದೇವಲಾಪುರ ಮತ್ತು ಹೊಣಕೆರೆ. ಇಲ್ಲಿ 365 ಗ್ರಾಮಗಳಿವೆ. ವಿಸ್ತೀರ್ಣ 1,040 ಚ.ಕಿ.ಮೀ. ಜನಸಂಖ್ಯೆ 1,90,814 (2001). ಈ ತಾಲ್ಲೂಕು 1882ರ ವರೆಗೆ ಹಾಸನ ಜಿಲ್ಲೆಯಲ್ಲಿತ್ತು. ಅನಂತರ ಮೈಸೂರು ಜಿಲ್ಲೆಯಲ್ಲಿತ್ತು. ಪ್ರತ್ಯೇಕ ಮಂಡ್ಯ ಜಿಲ್ಲೆಯನ್ನು ರಚಿಸಿದಾಗ ಆ ಜಿಲ್ಲೆಗೆ ಇದನ್ನು ಸೇರಿಸಲಾಯಿತು.

	ತಾಲ್ಲೂಕು ಸಾಮಾನ್ಯವಾಗಿ ಬಯಲು ನೆಲ, ಪಶ್ಚಿಮ ಮತ್ತು ಉತ್ತರದಲ್ಲಿ ಸಾಮಾನ್ಯವಾದ ಬೆಟ್ಟಗುಡ್ಡಗಳಿವೆ. ಚುಂಚನಗಿರಿ ಇವುಗಳಲ್ಲಿ ಪ್ರಸಿದ್ಧವಾದುದ್ದು. ತುಮಕೂರಿನಿಂದ ಹರಿದು ಬರುವ ಶಿಂಷಾ ನದಿ ಈ ತಾಲ್ಲೂಕಿನ ಪೂರ್ವದ ಗಡಿಯಾಗಿ ಅಲ್ಲಲ್ಲಿ ಸ್ವಲ್ಪ ದೂರ ಹರಿಯುತ್ತದೆ. ಲೋಕಪಾವನಿ ನದಿ ತಾಲ್ಲೂಕಿನ ನೈಋತ್ಯದಲ್ಲಿ ಹುಟ್ಟಿ ಸ್ವಲ್ಪ ದೂರ ಹರಿದು ದಕ್ಷಿಣಾಭಿಮುಖವಾಗಿ ಪಾಂಡವಪುರ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ. ತಾಲ್ಲೂಕು ಒಟ್ಟಿನಲ್ಲಿ ಪೂರ್ವ ಮತ್ತು ದಕ್ಷಿಣಕ್ಕೆ ಇಳಿಜಾರಾಗಿದೆ.

	ಪಶ್ಚಿಮದ ಶಿಲೆಗಳಲ್ಲಿ ಚಿನ್ನದ ನಿಕ್ಷೇಪವುಂಟು. ಆದರೆ ಇದು ಅತ್ಯಲ್ಪ; ಆರ್ಥಿಕವಾಗಿ ಲಾಭದಾಯಕವಲ್ಲ. ಮೃದುವಾದ ಬಳಪದ ಕಲ್ಲು ಇನ್ನೊಂದು ಖನಿಜ ನಿಕ್ಷೇಪ. ತಾಲ್ಲೂಕಿನಲ್ಲಿ ಅಲ್ಲಲ್ಲಿ ಕುರುಚಲು ಕಾಡುಗಳಿವೆ. ಇಲ್ಲಿಯ ಮಣ್ಣು ಸಾಮಾನ್ಯವಾಗಿ ಮರಳುಮಿಶ್ರಿತ. ಅಲ್ಲಲ್ಲಿ ಕೆಂಪು ಮಣ್ಣೂ ಉಂಟು. ವಾರ್ಷಿಕ ಸರಾಸರಿ ಮಳೆ 598 ಮೀಮೀ. ರಾಗಿ, ಜೋಳ, ಹುರುಳಿ, ತೊಗರಿ ಇವು ಮುಖ್ಯ ಬೆಳೆಗಳು. ಕೆರೆಗಳು ವಿಶೇಷವಾಗಿವೆ. ಬಾವಿಗಳ ನೆರವಿನಿಂದ ಬತ್ತ, ಕಬ್ಬುಗಳನ್ನೂ ಬೆಳೆಯುತ್ತಾರೆ. ಇತರ ಫಸಲುಗಳು ತೆಂಗು, ಬಾಳೆ, ಮೆಣಸಿನಕಾಯಿ, ತರಕಾರಿ. ಇಲ್ಲಿ ಬೆಳೆಯುವ ಪ್ರಸಿದ್ಧವಾದ ಬತ್ತ ತಿರುಗನಹಳ್ಳಿಯ ಸಣ್ಣ ಎಂಬುದು.

	ಕುರಿ ಸಾಕುವುದು ತಾಲ್ಲೂಕಿನ ಒಂದು ಮುಖ್ಯ ಕಸುಬು. ಇದು ಹಳ್ಳಿಕಾರ್ ರಾಸುಗಳಿಗೂ ಹೆಸರಾಗಿದೆ. ಕರಡಿಹಳ್ಳಿ ಪ್ರದೇಶದಲ್ಲಿ ಇದನ್ನು ಹೆಚ್ಚಾಗಿ ಸಾಕುತ್ತಾರೆ.

	ಈ ತಾಲ್ಲೂಕಿನ ಬೆಳ್ಳೂರಿನಲ್ಲಿ ಹೊಯ್ಸಳರ ಕಾಲದ ಗೌರೇಶ್ವರ, ಮೂಲೆ ಸಿಂಗೇಶ್ವರ ಮತ್ತು ಮಾಧವರಾಯ ದೇವಾಲಯಗಳಿವೆ. ಬಿಂಡಿಗನವಿಲೆಯಲ್ಲಿ ಕೇಶವ ದೇವಾಲಯವಿದೆ. ಆದಿಚುಂಚನಗಿರಿ ಒಂದು ಪುಣ್ಯಕ್ಷೇತ್ರ. ಕಂಬದಹಳ್ಳಿಯಲ್ಲಿ ಗಂಗರ ಕಾಲದ ವಾಸ್ತುಕೃತಿಗಳಿವೆ. ಇದು ಜೈನಕ್ಷೇತ್ರ. ಇಲ್ಲಿ ಸುಮಾರು 15 ಮೀ. ಎತ್ತರದ ಬ್ರಹ್ಮದೇವ ಕಂಬವಿದೆ. ಇದರ ಎದುರಿಗೇ ದ್ರಾವಿಡ ಶೈಲಿಯ ಪಂಚ (ಕೂಟ) ಬಸ್ತಿ ಇದೆ. ಆಲತಿಗಿರಿ ಒಂದು ಸುಂದರ ಸ್ಥಳ. ನಾಗಮಂಗಲಕ್ಕೆ ಪಶ್ಚಿಮದಲ್ಲಿ 6 ಕಿ.ಮೀ. ದೂರದಲ್ಲಿರುವ ಪಡುವಲಪಟ್ಟಣ ಒಂದು ಧಾರ್ಮಿಕ ಕ್ಷೇತ್ರ ಹಾಗೂ ವಿದ್ಯಾಕೇಂದ್ರವಾಗಿತ್ತು. ರಾಮಾನುಜಾಚಾರ್ಯರು ಇಲ್ಲಿ ತಪಸ್ಸು ಮಾಡಿದರೆಂದು ಒಂದು ಶಾಸನ ತಿಳಿಸುತ್ತದೆ. ಹೊಣಕೆರೆ ಹೋಬಳಿಯ ಮಾಚಲಗಟ್ಟ ಹಿಂದೆ ಬಿಜ್ಜಳೇಶ್ವರ ಎಂಬ ದೊಡ್ಡ ಊರಾಗಿತ್ತು. ಇಲ್ಲಿ 13ನೆಯ ಶತಮಾನದ ಮಲ್ಲೇಶ್ವರ ದೇವಾಲಯವಿದೆ. ಚೋಳಸಂದ್ರದಲ್ಲಿ 12ನೆಯ ಶತಮಾನದ ಒಂದು ಜೈನ ಬಸ್ತಿ ಇದೆ. ಹಟ್ಣದ ವೀರಭದ್ರದೇವಾಲಯ ಹಿಂದೆ ಜೈನಬಸ್ತಿಯಾಗಿತ್ತು. ಇದು ಹೊಯ್ಸಳ ಶೈಲಿಯ ಗುಡಿ. ಇದನ್ನು 1179ರಲ್ಲಿ ಕಟ್ಟಿಸಲಾಯಿತು. ಚಿನಕುರಳಿಯಲ್ಲಿ ಒಂದು ಆಂಜನೇಯ ದೇವಾಲಯವೂ ಮಾಸ್ತಿ ಗುಡಿಗಳೂ ಇವೆ. ಹೈದರ್ 1771ರಲ್ಲಿ ಇಲ್ಲಿ ಮರಾಠರಿಗೆ ಸೋತ. ನಲ್ಕುಂದಿ ಗ್ರಾಮದಲ್ಲಿ ಗೋಪಾಲಕೃಷ್ಣ ದೇವಾಲಯವಿದೆ. ಭಾಗವಂತಿಕೆ ಮೇಳಕ್ಕೆ ಇದು ಪ್ರಸಿದ್ಧವಾಗಿದೆ. ಹದ್ದಿನಕಲ್ಲಿನ ಹನುಮಂತರಾಯನ ಬೆಟ್ಟದ ಮೇಲೆ ಸುಮರು 3 ಮೀ. ಎತ್ತರದ ಕಂಬದಲ್ಲಿ ಇಂದ್ರಜಿತುವಿನ ಚಿತ್ರವನ್ನು ಕೆತ್ತಲಾಗಿದೆ. ಗಾಳಿ ಹಿಡಿದವರು ಇಲ್ಲಿ ಅದರಿಂದ ಬಿಡುಗಡೆ ಹೊಂದಬಹುದು ಎಂಬುದು ಜನರ ನಂಬಿಕೆ. ಈ ಬೆಟ್ಟದ ಬುಡದಲ್ಲಿರುವ ಚೋರಸಂದ್ರ ಒಂದು ಜನಪದ ಕಲಾಕೇಂದ್ರ.

	ನಾಗಮಂಗಲ ಪಟ್ಟಣ ಈ ತಾಲ್ಲೂಕಿನ ಮುಖ್ಯ ಸ್ಥಳ. ಇದು ಉ.ಅ. 12( 49' ಮತ್ತು ಪೂ.ರೇ. 76( 49' ಮೇಲೆ ಇದೆ. ಸಮುದ್ರಮಟ್ಟಕ್ಕೆ ಸುಮಾರು 786 ಮೀ. ಎತ್ತರದಲ್ಲಿರುವ ಈ ಪಟ್ಟಣ ಮೈಸೂರಿನಿಂದ ಸುಮಾರು 65 ಕಿ.ಮೀ. ಉತ್ತರಕ್ಕೆ ಇದೆ. ಪಟ್ಟಣದ ಜನಸಂಖ್ಯೆ 16,050 (2001). ಪುರಸಭೆ, ಆಸ್ಪತ್ರೆ, ಪಶುವೈದ್ಯಶಾಲೆ, ಪ್ರೌಢಶಾಲೆಗಳು, ಕಿರಿಯ ಕಾಲೇಜು, ಉಪಾಧ್ಯಾಯ ತರಬೇತು ಕಾಲೇಜು ಇವೆ. ಇದೊಂದು ವ್ಯಾಪಾರ ಸ್ಥಳ. ಇಲ್ಲಿ ಪ್ರತಿ ಶುಕ್ರವಾರ ಸಂತೆ ಸೇರುತ್ತದೆ. ಹಿತ್ತಾಳೆ ಕೆಲಸ, ಕಂಚಿನ ವಿಗ್ರಹ ತಯಾರಿಕೆಗಳಿಗೆ ಈ ಪಟ್ಟಣ ಪ್ರಸಿದ್ಧವಾದದ್ದು.

	ದೇವರಿರುವ ಹುತ್ತವನ್ನು ಲೋಹಿತ ವಂಶದವನೊಬ್ಬ ಕನಸಿನಲ್ಲಿ ಕಂಡು ಅದನ್ನು ಅರಸುತ್ತ ಈ ಸ್ಥಳಕ್ಕೆ ಬಂದನೆಂದೂ ಇಲ್ಲಿ ನರಸಿಂಹ ದೇವರು ಆವಿರ್ಭಾವವಾಗಿದ್ದುದನ್ನು ನೋಡಿ ಇಲ್ಲಿ ದೇವಾಲಯ ನಿರ್ಮಿಸಿದನೆಂದೂ ಪ್ರತೀತಿ. ಅವನು ಇಲ್ಲಿ ದೇವರ ಸುತ್ತ ಒಂದು ನಾಗರಹಾವು ಸುತ್ತುತ್ತಿದ್ದುದನ್ನು ಕಂಡುದರಿಂದ ಈ ಸ್ಥಳಕ್ಕೆ ನಾಗಮಂಡಲವೆಂದು ಹೆಸರಾಯಿತೆಂದೂ ಅನಂತರ ಇದು ನಾಗಮಂಗಲವಾಯಿತೆಂದೂ ಹೇಳಲಾಗಿದೆ. ಮಹಾಭಾರತದ ಮಣಿಪುರ ಇದೆಂದೂ ನಂಬಲಾಗಿದೆ. ಇದಕ್ಕೆ ಚತುರ್ವೇದ ಭಟ್ಟಾರಕ ರತ್ನ ಅಗ್ರಹಾರವೆಂದು ಹೆಸರಿತ್ತು. ಇದು ವ್ಯಾಪಾರ ಮತ್ತು ವಿದ್ಯಾಕೇಂದ್ರವಾಗಿತ್ತು ಎಂದೂ ಪ್ರತೀತಿಯಿದೆ. ಇಲ್ಲಿ ಗಂಗರ ಕಾಲದ ಶಾಸನವೊಂದು ದೊರಕಿದೆ. 1135ರಲ್ಲಿ ವಿಷ್ಣುವರ್ಧನನ ರಾಣಿ ಬೊಮ್ಮಲದೇವಿಯಿಂದ ಇಲ್ಲಿಯ ಅಗ್ರಹಾರದ ಜೀರ್ಣೋದ್ಧಾರವಾಯಿತು. ಲೋಹಿತವಂಶದ ಪಾಳೆಯಗಾರರು ಇಲ್ಲಿ 17ನೆಯ ಶತಮಾನದವರೆಗೂ ಆಳುತ್ತಿದ್ದರೆಂದೂ ಹೇಳಲಾಗಿದೆ. ಈ ವಂಶದ ಜೈವಿಡ ನಾಯಕ ಇಲ್ಲಿಯ ಒಳಕೋಟೆಯನ್ನೂ (1270) ಚನ್ನಪಟ್ಟಣದ ಜಗದೇವರಾಯ ಹೊರಕೋಟೆಯನ್ನೂ ಕಟ್ಟಿಸಿದನೆಂದೂ ಹೇಳಲಾಗಿದೆ. 1630ರಲ್ಲಿ ಇದು ಒಡೆಯರ ಆಳ್ವಿಕೆಗೆ ಬಂತು. ಮೈಸೂರು-ಮರಾಠ ಯುದ್ಧಗಳಲ್ಲಿ ಇದು ಬಹಳ ಹಾನಿಗೆ ಒಳಗಾಯಿತು. ಮರಾಠರ ಪರಶುರಾಮ ಭಾವು 1792ರಲ್ಲಿ ಇದನ್ನು ಕೊಳ್ಳೆ ಹೊಡೆದ.

	ಇಲ್ಲಿಯ ದೇವಾಲಯಗಳಲ್ಲಿ ಸೌಮ್ಯಕೇಶವ ಗುಡಿ ದೊಡ್ಡದು. ಇದು ಬಹುಶಃ ವಿಷ್ಣುವರ್ಧನನ ಕಾಲದ್ದು. ಇದರ ನಕ್ಷತ್ರಾಕಾರದ ಜಗತಿಯ ಎತ್ತರ ಸುಮಾರು 1.4 ಮೀ. ಇದು ತ್ರಿಕೂಟಾಚಲ. ಮಧ್ಯದ ಗುಡಿ ಸೌಮ್ಯಕೇಶವನದು; ಆಚೀಚಿನವು ಅರೆಗಂಬಗಳ ಅಲಂಕರಣವಿದೆ. ಸುತ್ತಲೂ ಪ್ರಾಕಾರವಿದೆ. ಮಹಾದ್ವಾರದ ಮೇಲಿನ ದ್ರಾವಿಡ ಗೋಪುರ ಏಳು ಅಂತಸ್ತುಗಳದು. ಪಾತಾಳಾಂಕಣದಲ್ಲಿ ಶ್ರೀವೈಷ್ಣವ ಸಂಪ್ರದಾಯದ ದೇವರುಗಳು ಮತ್ತು ಆಳ್ವಾರುಗಳ ಗುಡಿಗಳಿವೆ. ದೇವಾಲಯದ ಮುಂದಿನ ಸುಂದರ ಗರುಡಗಂಬದ ಎತ್ತರ ಸುಮಾರು 16.8 ಮೀ. ಈ ದೇವಾಲಯದ ಸಮೀಪದಲ್ಲಿರುವ ನರಸಿಂಹ ದೇವಾಲಯವೂ ಹೊಯ್ಸಳರ ಕಾಲದ್ದು. ಇದು ಇಲ್ಲಿಯ ಅತ್ಯಂತ ಪ್ರಾಚೀನ ದೇವಾಲಯ ಎಂದು ಹೇಳಲಾಗಿದೆ. ಭುವನೇಶ್ವರ ದೇವಾಲಯವೂ ಹೊಯ್ಸಳರ ಕಾಲದ್ದೇ. ಆದರೆ ಇದು ಬಹಳಮಟ್ಟಿಗೆ ದ್ರಾವಿಡ ಸಂಪ್ರದಾಯದ ಕಟ್ಟಡ. ವೀರಭದ್ರ ಮತ್ತು ಭದ್ರಕಾಳಿ, ಗ್ರಾಮದೇವತೆಯಾದ ಬಡಗೋಡಮ್ಮ, ಅಕ್ಕಸಾಲಿಗರ ದೇವತೆಯಾದ ಕಾಳಮ್ಮ ಇವರ ಗುಡಿಗಳು ಇವೆ. ಊರಿನ ನಾಲ್ಕೂ ಕಡೆ ನಾಲ್ಕು ಕೆರೆಗಳುಂಟು. ಸೌಮ್ಯಕೇಶವ ಮತ್ತು ನರಸಿಂಹ ಗುಡಿಗಳ ಮಧ್ಯೆ ಜಗದೇವರಾಯನ ಅರಮನೆ ಇತ್ತು ಎಂದು ಹೇಳಲಾಗಿದೆ. ಇದರ ಸಮೀಪದಲ್ಲೆ ಒಂದು ದೊಡ್ಡ ಮಂಟಪವಿದೆ. ಇದು ಸಭಾಮಂಟಪವಾಗಿದ್ದಿರಬಹುದೆಂದು ಊಹಿಸಲಾಗಿದೆ. ಊರಿನ ಸಮೀಪದಲ್ಲಿರುವ, ಸುಮಾರು 18 ಮೀ. ವ್ಯಾಸದ ಮತ್ತು ಸುಮಾರು 0.9 ಮೀ. ಆಳದ ಕೊಳವನ್ನು ಜಗದೇವರಾಯ ಜಲಕ್ರೀಡೆಗಾಗಿ ಕಟ್ಟಿಸಿದನೆಂದು ಇಲ್ಲಿಯ ಜನ ಹೇಳುತ್ತಾರೆ. ಈ ಕೊಳದ ನಡುವೆ ಒಂದು ಮಂಟಪ ಇದೆ.			
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
		   (ಕೆ.ಎ.ಆರ್.)